ಸುತ್ತೂರು ಶ್ರೀ ಕ್ಷೇತ್ರ ಮೊದಲಿಗೆ ಶ್ರೋತ್ರಿಯೂರು ಎಂಬ ಹೆಸರಿನ ಪ್ರಸಿದ್ಧ ಅಗ್ರಹಾರವಾಗಿತ್ತು ಎಂದು ಶಾಸನಗಳಿಂದ ತಿಳಿದುಬರುತ್ತದೆ. ಜೊತೆಗೆ ಇದು ಜೈನ ಕೇಂದ್ರವೂ ಆಗಿತ್ತೆಂಬುದಕ್ಕೆ ಸಾಕ್ಷಿಯಾಗಿ ಇತ್ತೀಚಿನವರೆಗೂ ಇಲ್ಲಿ ಒಂದು ಬಸದಿ ಇತ್ತು. ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಚಟುವಟಿಕೆಗಳಿಂದ ಸುತ್ತೂರು ಪ್ರಮುಖ ವೀರಶೈವ ಕ್ಷೇತ್ರವಾಯಿತು.
ಶ್ರೀಗಳವರು ಜನಿಸಿದ್ದು ಶಿವರಾತ್ರಿಯಂದು, ಅವರು ಲಿಂಗೈಕ್ಯರಾಗಿದ್ದು ಶಿವರಾತ್ರಿಯಂದು. ಹಾಗಾಗಿ ಅವರಿಗೆ ಶಿವರಾತ್ರೀಶ್ವರ ಎಂಬ ಹೆಸರು ಅನ್ವರ್ಥವಾಗಿದೆಯೆಂದು ಭಕ್ತರು ನಂಬುತ್ತಾರೆ.
Guruparampara of Sri Peetha / ಶ್ರೀ ಪೀಠದ ಗುರುಪರಂಪರೆ
ಶ್ರೀಪೀಠದ ಗುರುಪರಂಪರೆಯ ಎಲ್ಲಾ ಪೀಠಾಧಿಪತಿಗಳೂ ಸದಾ ಸಮಾಜಮುಖಿಗಳಾಗಿದ್ದರು. ಇದರ ಕುರುಹಾಗಿ, 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯ ನಂತರ ನೆಲೆಯನ್ನರಸಿ ಬಂದ ಮುಸುಡಿ ಚೌಡಯ್ಯ ಮತ್ತಿತರ ಶರಣರಿಗೆ ಆಶ್ರಯ ನೀಡಿದ್ದು, ಶ್ರೀಕ್ಷೇತ್ರಕ್ಕೆ ಬಂದ ಮೇಲೆ ಮಹದೇಶ್ವರರಿಗೆ ಕಾಯಕದೀಕ್ಷೆ ನೀಡಿದ್ದು, ಶ್ರೀಪೀಠಕ್ಕೆ ಆಗಮಿಸಿದ ಶ್ರೀ ಎಡೆಯೂರು ಸಿದ್ದಲಿಂಗೇಶ್ವರರೊಡನೆ ಅಂದಿನ ಜಗದ್ಗುರುಗಳಾದ ಶ್ರೀ ಘನಲಿಂಗದೇವರು ಧರ್ಮಪ್ರಸಾರಕ್ಕೆ ತೆರಳಿದ್ದು, ಸ್ವತಃ ವಚನರಚನೆ ಮಾಡಿದ್ದು ಶ್ರೀಮಠದ ಇತಿಹಾಸವಾಗಿ ಲೋಕಪ್ರಸಿದ್ಧವಾಗಿದೆ.
ಇದುವರೆಗೆ ಒಟ್ಟು ಇಪ್ಪತ್ನಾಲ್ಕು ಜನ ಪೀಠಾಧಿಪತಿಗಳು ಶ್ರೀಪೀಠವನ್ನು ಅಲಂಕರಿಸಿದ್ದಾರೆ. ಸದ್ಯ 24ನೇ ಪೀಠಾಧಿಪತಿಗಳು ಆಗಿರುವ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಶ್ರೀಮಠದ ಶ್ರೇಯೋಭಿವೃದ್ಧಿ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
----------
ಪೀಠಾಧಿಪತಿಗಳ ಅಥವಾ ಗುರುಪರಂಪರೆ ಕುರಿತಾದ ಸಂಪೂರ್ಣ ವಿವರಗಳು ಮೀಡಿಯಾ ಸೆಕ್ಷನ್ನ ಇ-ಬುಕ್ನಲ್ಲಿ ಲಭ್ಯವಿವೆ.
Puranic Background / ಪೌರಾಣಿಕ ಹಿನ್ನೆಲೆ
ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರು ಹತ್ತು ಶತಮಾನಗಳ ಹಿಂದೆ ಕಂಚಿಯ ಚೋಳರು ಹಾಗೂ ತಲಕಾಡಿನ ಗಂಗರ ನಡುವೆ ನಡೆಯಬಹುದಾಗಿದ್ದ ಯುದ್ಢವನ್ನು ತಮ್ಮ ತಪಶ್ಯಕ್ತಿಯಿಂದ ನಿವಾರಿಸಿ ಶಾಂತಿಯನ್ನು ನೆಲೆಗೊಳಿಸಿದರು. ಬಳಿಕ ಅವರೀರ್ವರ ಕೋರಿಕೆಯಂತೆ ಸುತ್ತೂರಿನಲ್ಲಿ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರು ಮಠವನ್ನು ಸ್ಥಾಪಿಸಿದರು.
ಗಂಗರ ಮೇಲೆ ಯುದ್ಧಕ್ಕೆ ಬಂದ ಚೋಳ ಚಕ್ರವರ್ತಿಯ ಕುದುರೆಯು, ಧ್ಯಾನಾಸಕ್ತರಾಗಿದ್ದ ಶಿವಯೋಗಿಗಳಿಗೆ ಭಕ್ತಿಯಿಂದ ಪ್ರದಕ್ಷಿಣೆ ಹಾಕಿ ಬಂದಿದ್ದರಿಂದ ಈ ಊರಿಗೆ ಪ್ರದಕ್ಷಿಣಪುರ ಎಂಬ ಹೆಸರು ಬಂದಿತೆಂದು ಪ್ರತೀತಿ ಇದೆ.