ಹೊಯ್ಸಳರ ಕಾಲದ ಈ ಪ್ರಾಚೀನ ದೇಗುಲವು ಮೊದಲಿಗೆ ಗ್ರಾಮದ ಮಧ್ಯಭಾಗದಲ್ಲಿತ್ತು. ಭಕ್ತರ ಅಪೇಕ್ಷೆಯಂತೆ ಶ್ರೀಗಳವರು ದೇವಸ್ಥಾನವನ್ನು ಅಲ್ಲಿಂದ ಸ್ಥಳಾಂತರಿಸಿ ಕಪಿಲಾ ನದಿ ತೀರದಲ್ಲಿ ಯಥಾವತ್ತಾಗಿ ಪುನರ್ನಿರ್ಮಾಣ ಮಾಡಿಸಿದರು. ಶ್ರೀ ವೀರಭದ್ರೇಶ್ವರ ದೇವಾಲಯದ ವಿನ್ಯಾಸವನ್ನೇ ಬಹುಮಟ್ಟಿಗೆ ಹೋಲುವ ಈ ದೇವಾಲಯವು ನಾಲ್ಕು ಶಿಲಾಸ್ತಂಭಗಳ ಮುಖಮಂಟಪವನ್ನು ಹೊಂದಿದೆ. ಮಂಡಿ ನೋವಿರುವವರು ಈ ಆಲಯದ ಆವರಣದಲ್ಲಿರುವ ನರಿತಲೆಕಲ್ಲಿಗೆ ಮಂಡಿಯನ್ನು ಸೋಕಿಸಿದರೆ ರೋಗ ವಾಸಿಯಾಗುತ್ತದೆ ಎಂದು ಜನರು ನಂಬಿದ್ದಾರೆ. ಇಲ್ಲಿ ನಾಗರಕಲ್ಲು ಸಹ ಪ್ರತಿಷ್ಠೆಯಾಗಿದೆ.
ಶ್ರೀ ಪೀಠದ ನಾಲ್ಕನೆಯ ಜಗದ್ಗುರುಗಳಾದ ಶ್ರೀ ಸಿದ್ಧನಂಜ ದೇಶಿಕೇಂದ್ರ ಮಹಾಸ್ವಾಮಿಗಳ ಅವಧಿಯಲ್ಲಿ ಮಲೆಯ ಮಹದೇಶ್ವರರು ಶ್ರೀ ಮಠಕ್ಕೆ ಆಗಮಿಸಿದ್ದರು. ಇಲ್ಲಿದ್ದಾಗ, ಅನೇಕ ಬಾರಿ ಅವರು ಬಾರಿ ರಾಗಿ ಬೀಸುವ ಕಾಯಕವನ್ನು ಮಾಡಿದ್ದರು. ಅವರು ಬಳಸಿದ್ದ ರಾಗಿಕಲ್ಲನ್ನು ಶ್ರೀಮಠದಲ್ಲಿ ಇಂದೂ ಪೂಜಿಸಲಾಗುತ್ತಿದ್ದು ಅದನ್ನು ಸಾರ್ವಜನಿಕರ ವೀಕ್ಷಣೆಗಾಗಿ ಸಂರಕ್ಷಿಸಲಾಗಿದೆ.
ಶ್ರೀ ಮಠದ ದಕ್ಷಿಣ ದಿಕ್ಕಿಗೆ, ಕಪಿಲಾನದಿಯ ತೀರದಲ್ಲಿ, ಪ್ರಕೃತಿ ಸೌಂದರ್ಯದ ನಡುವೆ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಕರ್ತೃಗದ್ದುಗೆ ಇದೆ. ಹಿಂದೆ ಈ ಗದ್ದುಗೆ ಇದ್ದ ಕಡೆ ದಟ್ಟವಾದ ತೋಪಿದ್ದುದರಿಂದ ಜನರು ಇದನ್ನು ಕಾಡುಮಠವೆಂದು ಕರೆಯುತ್ತಿದ್ದರು. ಗದ್ದುಗೆಯ ಆವರಣದಲ್ಲಿ ಶ್ರೀಮಠದ ಜಗದ್ಗುರುಗಳಾದ ಶ್ರೀ ಶಿವರಾತ್ರೀಶ್ವರರು, ಶ್ರೀ ಈಶಾನೇಶ್ವರ ಒಡೆಯರು, ಶ್ರೀ ನಿಜಲಿಂಗ ಶಿವಾಚಾರ್ಯರರು, ಶ್ರೀ ಸಿದ್ಧಮಲ್ಲ ಶಿವಾಚಾರ್ಯರು, ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಶ್ರೀ ಪಟ್ಟದ ಶಿವರಾತ್ರೀಶ್ವರ ಮಹಾಸ್ವಾಮಿಗಳು ಮತ್ತು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಗದ್ದುಗೆಗಳಿವೆ. ಶ್ರೀಮಠದ ಕೆಲವು ಜಗದ್ಗುರುಗಳು ಧರ್ಮಪ್ರಸಾರಕ್ಕಾಗಿ ಬೇರೆ ಬೇರೆ ಕಡೆ ಪ್ರವಾಸ ಕೈಗೊಂಡಿದ್ದಾಗ ಅಲ್ಲಿಯೇ ಲಿಂಗೈಕ್ಯರಾಗಿದ್ದಾರೆ.
ಗ್ರಾಮದೇವತೆಗಳಾದ ದೊಡ್ಡಮ್ಮತಾಯಿ ಹಾಗೂ ಸುತ್ತೂರಮ್ಮ ದೇವಸ್ಥಾನಗಳು ಅತಿ ಪುರಾತನವಾದವು. ಈ ದೇವಸ್ಥಾನಗಳನ್ನು ಇತ್ತೀಚಿಗೆ ಪುನರ್ ನಿರ್ಮಾಣ ಮಾಡಲಾಗಿದೆ. ಸುತ್ತೂರಮ್ಮನ ದೇವಾಲಯದಲ್ಲಿ ಸಪ್ತಮಾತೃಕಾ ದೇವತೆಗಳೂ ಇರುವುದು ವಿಶೇಷವಾಗಿದೆ. ಸುತ್ತಮುತ್ತಲಿನ ಹಲವಾರು ಗ್ರಾಮಗಳ ಕುಟುಂಬಗಳಿಗೆ ಸುತ್ತೂರಮ್ಮ ಮನೆದೇವತೆಯಾಗಿದ್ದಾಳೆ.
ಶ್ರೀಮಠದ ದಕ್ಷಿಣಕ್ಕೆ 2 ಕಿ.ಮೀ ದೂರದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನವಿದೆ. ಐದು ಅಡಿ ಎತ್ತರದ ಮೂರ್ತಿಯು ಉತ್ತರಾಭಿಮುಖವಾಗಿದ್ದು ನಯನಮನೋಹರವಾಗಿದೆ. ಮೂರ್ತಿಯ ಬಲಪಾರ್ಶ್ವದಲ್ಲಿ ದಕ್ಷಬ್ರಹ್ಮನಿದ್ದಾನೆ. ಪ್ರತಿ ವರ್ಷ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಈ ದೈವದ ಕೊಂಡೋತ್ಸವವು ನಡೆಯುತ್ತದೆ. ವೀರಭದ್ರೇಶ್ವರ ಸ್ವಾಮಿ ಸುತ್ತಲೂ ಅನೇಕ ಜನರ ಮನೆದೇವರಾಗಿದ್ದಾನೆ.
ಚಕ್ರವರ್ತಿ ರಾಜೇಂದ್ರ ಚೋಳನು ಕ್ರಿ.ಶ. 1032ರಲ್ಲಿ ಶ್ರೀಕ್ಷೇತ್ರದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಿ ಆದಿ ಜಗದ್ಗುರುಗಳವರಿಗೆ ಸಮರ್ಪಿಸಿದನು. ಎರಡನೆಯ ಪೀಠಾಧಿಪತಿಗಳಾದ ಶ್ರೀ ಈಶಾನೇಶ್ವರ ಒಡೆಯರ್ ಅವರು ಇಲ್ಲಿ ಸ್ಥಾನಪತಿಗಳಾಗಿದ್ದರೆಂದು ಶಾಸನಗಳ ಉಲ್ಲೇಖವಿದೆ. ಈ ದೇವಸ್ಥಾನವು ಮೂಲದಲ್ಲಿ ತ್ರಿಕೂಟಾಚಲದ ಸ್ವರೂಪವನ್ನು ಹೊಂದಿದ್ದು, ಬಳಿಕ ಹೊಯ್ಸಳರ ಕಾಲದಲ್ಲಿ ಬಳಪ ಹಾಗೂ ಗ್ರಾನೈಟ್ ಶಿಲೆಗಳಿಂದ ಪುನರ್ ನಿರ್ಮಾಣಗೊಂಡಿತು. ಇಲ್ಲಿ ಪರಿವಾರ ದೇವತೆಗಳಾದ ವೀರಭದ್ರ, ಶಂಕರನಾರಾಯಣ (ವಿಗ್ರಹದ ಮೇಲ್ಭಾಗದಲ್ಲಿ ದಶಾವತಾರ ಮತ್ತು ಏಕಾದಶ ರುದ್ರರ ಚಿತ್ರಗಳಿವೆ) ಅಮೃತೇಶ್ವರಿ, ದಕ್ಷಿಣಾಮೂರ್ತಿ, ಬ್ರಹ್ಮ ಹಾಗೂ ಚಂಡಿಕೇಶ್ವರಿಯ ವಿಗ್ರಹಗಳಿವೆ. ಈ ದೇವಾಲಯವು 1935ರಲ್ಲಿ ಹಾಗೂ 2005ರಲ್ಲಿ ಜೀರ್ಣೋದ್ಧಾರಗೊಂಡಿದೆ. ಶ್ರೀ ಸೋಮೇಶ್ವರ ಸ್ವಾಮಿಯು ಅನೇಕ ಜನರಿಗೆ ಮನೆದೇವರಾಗಿದ್ದಾನೆ.