ಕಟುಕರ ಪಾಲಾಗುವ ಗೋವುಗಳಿಗೆ ರಕ್ಷೆ – ವಿಶಿಷ್ಟ ಅಭಯ ಜಾತ್ರೆಗೆ ಚಾಲನೆ
ಭಾರತೀಯ ಗೋಸಂಪತ್ತನ್ನು ಸಂರಕ್ಷಿಸುವ ಮಹದುದ್ದೇಶದ ಅಭಯ ಜಾತ್ರೆಗೆ ಹನೂರು ತಾಲೂಕು ಕೆಂಪಯ್ಯನಹಟ್ಟಿಯಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.ದೇಸಿ ಹಸುಗಳ ವಹಿವಾಟಿಗೆ ಮಾತ್ರ ಇಲ್ಲಿ ಅವಕಾಶವಿದ್ದು, ಕಟುಕರಿಗೆ ಪ್ರವೇಶವಿಲ್ಲದ ದೇಶದ ಮೊಟ್ಟಮೊದಲ ಜಾನುವಾರು ಜಾತ್ರೆ ಎನಿಸಿಕೊಂಡಿದೆ. ರೈತರಿಂದ ನೇರವಾಗಿ ರೈತರು ಅಥವಾ ಅಧಿಕೃತ ಗೋಶಾಲೆಗಳಿಗಾಗಿ ಗೋವು ಖರೀದಿಸಲು ಮಾತ್ರ ಇಲ್ಲಿ ಅವಕಾಶವಿದೆ.
ಗ್ರಾಮಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಗೋಪೂಜೆ ನೆರವೇರಿಸಿ ಗೋಗ್ರಾಹ ನೀಡುವ ಮೂಲಕ ಅಭಯ ಜಾತ್ರೆಗೆ ಚಾಲನೆ ನೀಡಿದರು. ಶ್ರೀರಾಮಚಂದ್ರಾಪುರ ಮಠದ ಕಾಮದುಘ ವಿಭಾಗದ ಕಾರ್ಯದರ್ಶಿ ಡಾ. ವೈ.ವಿ. ಕೃಷ್ಣಮೂರ್ತಿ, ಕೆಂಪಯ್ಯನಹಟ್ಟಿ ಗವ್ಯ ಉದ್ಯಮ ವಿಭಾಗದ ಮುಖ್ಯಸ್ಥ ಶಾಮಪ್ರಸಾದ್ ಬೇರ್ಕಡವು, ರೈತಮುಖಂಡ ಕೆ.ವಿ.ಸಿದ್ದಪ್ಪ, ಮಲೆಮಹದೇಶ್ವರಸ್ವಾಮಿ ದೇವಸ್ಥಾನದ ಅರ್ಚಕ ಮಾದೇಶ್, ಆಂದೋಲನ ವಿಭಾಗದ ಕಾರ್ಯದರ್ಶಿ ಅಶೋಕ್ ಕೆದ್ಲ, ರಾಜ್ಯ ಗೋಪರಿವಾರದ ಮಾಧ್ಯಮ ವಿಭಾಗದ ಅಧ್ಯಕ್ಷ ಉದಯ ಶಂಕರ ಭಟ್ ಮಿತ್ತೂರು ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
ಮೂರು ದಿನಗಳ ಕಾಲ ನಡೆಯುವ ಈ ಅಭಯ ಜಾತ್ರೆಯಲ್ಲಿ 2000ಕ್ಕೂ ಹೆಚ್ಚು ಜಾನುವಾರುಗಳನ್ನು ಬೆಟ್ಟದ ತಪ್ಪಲಿನ ವಿವಿಧ ಗ್ರಾಮಗಳಿಂದ ರೈತರು ತಂದಿದ್ದಾರೆ. ಮೈಸೂರು, ಗದಗ, ಗುಜರಾತ್ನ ಅಹ್ಮದಾಬಾದ್ ಸೇರಿದಂತೆ ವಿವಿಧ ಕಡೆಗಳಿಂದ ಗ್ರಾಹಕರು ಆಗಮಿಸಿದ್ದಾರೆ. ಮಾರಾಟವಾಗದೇ ಉಳಿದ ಮುದಿ ಹಸುಗಳು ಹಾಗೂ ಅಶಕ್ತ ಹಸುಗಳನ್ನು ಶ್ರೀರಾಮಚಂದ್ರಾಪುರ ಮಠವೇ ಖರೀದಿಸಿ ಸಾಕುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ.